ಇಬ್ಬನಿ

April 20, 2008

ಹೌದು….. ನೀನ್ಯಾಕೆ ಒಲಿಯಬಾರದು ?

Filed under: Uncategorized — kemmayi @ 2:55 pm

ನೋಡದ ಹುಡುಗಿಗೆ….,

ನೀನು ಹೇಗಿದ್ದೀಯೋ ಗೊತ್ತಿಲ್ಲ, ಎಲ್ಲಿದ್ದಿ ಅಂತ ಮಾತ್ರ ಗೊತ್ತು. ನಿನ್ನ ನೋಡೂ ಇಲ್ಲ. ಆದರೆ, ಲೆಕ್ಕವಿಲ್ಲದಷ್ಟು ಬಾರಿ ಮಾತನಾಡಿದ್ದೇನೆ. ಯಾರೇ ನೀನು ಚೆಲುವೆಯ ರವಿಚಂದ್ರನ್ ಥರಾ ಆಗಿದೆ ನನ್ನ ಸ್ಥಿತಿ. ಪ್ರೀತಿಸಬೇಕು ಅಂತ ಬಯಸಿದ್ದೇನೆ. ಹಾಗೆ ಬಯಸುವುದರಲ್ಲಿ ತಪ್ಪೇನಿದೆ ಹೇಳು ?

ದೇವರಿದ್ದಾನೋ……… ಇಲ್ಲವೋ ? ವಾದ ಮಾಡುವವರು ಮಾಡುತ್ತಲೇ ಇರಲಿ ನಂಗಂತೂ ನೀನೇ ದೇವತೆ. ನಿನ್ನನ್ನೇ ಪೂಜಿಸುತ್ತೇನೆ. ನಿನಗೇ ಸಂಪೂರ್ಣ ನಿಷ್ಠನಾಗಿದ್ದೇನೆ. ಹಾಗಂತ ನಿನ್ನ ಎದುರಿಗೇ ಕುಳಿತು, ನಿನ್ನ ಕಣ್ಣಲ್ಲಿ ಕಣ್ಣಿಟ್ಟು ಹೇಳಬೇಕು ಅಂತ ಅಂದುಕೊಳ್ಳುತ್ತೇನೆ. ಅದರೇನು ಮಾಡಲಿ, ಏಳು ಸಮುದ್ರ ದಾಟಿ ಬರಬಲ್ಲೆ, ಆದರೆ ಈ ಬಂಜರು ಭೂಮಿ ದಾಟಿ ಬರುವುದೇ ಸಮಸ್ಯೆ ನೋಡು.

ನಿನಗಾದರೂ ಏನು ಕಮ್ಮಿ ಹೋಳು. ಮಲೆನಾಡಿನ ಹುಡುಗಿ. ಕಣ್ಣು ಹಾಯಿಸಿದಷ್ಟು ದೂರಕ್ಕೂ ಹಸಿರ ಪಲ್ಲಂಗ, ಹೆಜ್ಜೆಯಿಟ್ಟಲ್ಲೆಲ್ಲಾ ನೀರು. ಈಗಂತೂ ಮಳೆಯ ಹಾಡು. ನನ್ನ ಅವಸ್ಠೆ ಕೇಳಿಲ್ಲಿ….. ಮಳೆ ಬಿಡು ಇಬ್ಬನಿಯ ಹನಿಯೂ ಇಲ್ಲ. ಬರೀ ಬೋಲು ಗುಡ್ಡಗಳ ಸಾಲು. ಒಂದಾನೊಂದು ಕಾಲವಿತ್ತು. ಮಳೆಬಂದರೆ ಸಾಕು, ಮನಸೋ ಇಚ್ಚೆ ಮುಂಗಾರಿನ ಅಂಗಳದಲ್ಲಿ ಕುಣಿಯುತ್ತಿದ್ದೆ. ಮೊದಲ ಮಳೆಗೆ ಬೀಳುವ ಆಲಿಕಲ್ಲು ಹೆಕ್ಕಿಕೊಳ್ಳಲು ಹಪಹಪಿಸುತ್ತಿದ್ದೆ. ಶಾಲೆಯೊಳಗಡೆ ನೀರು ಬಂದರೆ ಸಾಕು, ನೋಟು ಪುಸ್ತಕದ ಹಾಳೆಗಳು ದೋಣಿ ಗಳಾಗುತ್ತಿದ್ದವು. ಮನ್ಗೆ ಬಂದರೆ, ಅಜ್ಜನ ಹುಳಿ ಅಡರಿನ ಏಟು ಕಾಯ್ತಾ ಇರುತ್ತಿತ್ತು. ಈಗ ಹಾಗಲ್ಲ ನೋಡು. ಇಲ್ಲಿ ಮಳೆ ಒಲಿಯುವುದೇ ಇಲ್ಲ, ಹೌದು….. ನೀನ್ಯಾಕೆ ಒಲಿಯಬಾರದು ?

ನಿನ್ನ ಪೆದ್ದು ಹುಡುಗ

April 14, 2008

ರಾಸ್ಕಲ್ ದೇವದಾಸನೂ… ಹೈದ್ರಾಬಾದ್ ಮಳೆಯೂ…..,

Filed under: ಸುಮ್ ಸುಮ್ನೆ — kemmayi @ 12:58 pm
Tags: ,

 

ನಿನ್ನೆ ರಾತ್ರಿ ಇದ್ದಕ್ಕಿದ್ದ ಹಾಗೆ ಸುರಿಯಿತಲ್ಲ, ಪಿರಿಪಿರಿ ಮಳೆ, ಅದ್ಯಾಕೋ ನಾನು ಒಂದು ವರುಷ ಹಿಂದೆ ಹೋಗಿ ಬಿಟ್ಟೆ. ಅಷ್ಟಕ್ಕೆಲ್ಲಾ ಕಾರಣ.. ರಸ್ತೆ ಬದಿಯಲ್ಲಿ ಸುಮ್ಮನೆ ಮುದುಡಿ ಮಲಗಿದ್ದ ನಾಯಿಮರಿ, ಬಿಳಿಯ ಬಣ್ಣದ್ದು. ಅದು ಮಲಗಿದ ಪರಿ ನೋಡಿದರೆ ಥಟ್ಟನೆ ನೆನಪಾಗುತ್ತಿದ್ದದ್ದು  ಮುಂಗಾರು ಮಳೆಯ ಆ ರಾಸ್ಕಲ್ ದೇವದಾಸ.

ಅಷ್ಟಕ್ಕೂ ಇಲ್ಲಿ ಮಳೆ ಬೀಳುವುದೇ ಅಪರೂಪ. ಹೈದ್ರಾಬಾದಿನ ರಸ್ತೆಗಳು  ಮಳೆ ಸಿಂಚನಕ್ಕೆ ಅದೆಷ್ಟು ಕಾದು ಕೂತಿರುತ್ತವೆ ಅಂದ್ರೆ, ಬಿದ್ದ ಹನಿ ಎಲ್ಲಿ ಹೋಗತ್ತೋ ಗೊತ್ತೇ ಆಗುವುದಿಲ್ಲ. ಧರೆ ಅಷ್ಟು ಬೇಗ ಹೀರಿಕೊಳ್ಳತ್ತೆ. ಮಳೆ ಕಾಣದೆ ನಾನಂತೂ ತೀರಾ ಬಂಜರಾಗಿದ್ದೆ – ಭಾವನೆಗಳೇ ಇಲ್ಲದೆ. ನಾನಾದರೂ ಬಂದದ್ದು ಕನ್ನಡ ತಾಯಿಯ ಪ್ರಭಾವಳಿ-ಕರಾವಳಿಯಿಂದ. ಅಲ್ಲಿ ಮಳೆ ಅಂದರೆ ಹಬ್ಬ. ಮೊದಲ ಹನಿ ಬೀಳುವುದಕ್ಕೆ ಹತ್ತು ನಿಮಿಷ ಮೊದಲೇ ಕೇಳಿಸೋ ಭೋ ಅನ್ನೋ ಸದ್ದು, ಅಂಗಳದಲ್ಲಿದ್ದ ಒಣ ಅಡಿಕೆ ತುಂಬಿಸೋ ಒದ್ದಾಟ, ಕಟ್ಟಿಗೆ ಒಟ್ಟಿಗೆ ಟರ್ಪಾಲು ಹೊದಿಸೋ ಧಾವಂತ, ದನಗಳನ್ನು ಹಟ್ಟಿಗೆ ಅಟ್ಟೋ ಆತಂಕ. ಇಷ್ಟೆಲ್ಲಾ ಆದರೂ ಮತ್ತೆ ಮಳೆಯಲ್ಲಿ ನೆನೆಯೋದಿದೆಯಲ್ಲಾ, ಅಬ್ಬಾ ಅದನ್ನು ಅನುಭವಿಸಿಯೇ ತೀರಬೇಕು.

ಅಂತಹ ಊರಲ್ಲಿ ಹುಟ್ಟಿ ಬೆಳೆದ ನನ್ನಂಥ ಮಳೆ-ಭಾವುಕನಿಗೆ ಇಲ್ಲಿ ದಿನಕಳೆಯೋದು ದುಸ್ತರ. ಅಲ್ಲಿ ಗಂಟೆಗಟ್ಟಲೇ… ದಿನವಿಡೀ ಸುರಿಯೋ ಮುಂಗಾರು ಮಳೆಗೂ ಇಲ್ಲಿ ಅಮಾವಾಸ್ಯೆಗೆ ಒಮ್ಮೆ ಮಾತ್ರ – ವರುಷಕ್ಕೆ ಹನ್ನೆರಡೇ ಸಲ ಬರೋ ಮಳೆಗೂ ಅದೆಷ್ಟು ಅಂತರ- ಅಬ್ಬಬ್ಬಾ ಅಂದರೆ ಐದೇ ನಿಮಿಷಕ್ಕೆ ಮಳೆ ಖಲಾಸ್! ನಿಮಗೆ ಆಶ್ಚರ್ಯ ಆಗಬಹುದು, ಛತ್ರಿ ಇಲ್ಲದೆ ನಾನು ಬರಾಬ್ಬರಿ ಮೂರು ಮಳೆಗಾಲ ಕಳೆದಿದ್ದೇನೆ.  ಅಷ್ಟರ ಮಟ್ಟಿಗೆ ಉಳಿತಾಯ!  ಇನ್ ಫ್ಯಾಕ್ಟ್ ಮಳೆಗಾಲ ಯಾವಾಗ ಆರಂಭ ಆಯಿತು ಯಾವಾಗ ಕೊನೆಗೊಂಡಿತು ಅಂತ ಗೊತ್ತೇ ಆಗಲ್ಲ.

ಅಂತಹ ಸ್ಥಿತಿಯಲ್ಲಿದ್ದಾಗ, ನಿನ್ನೆ ಇದ್ದಕ್ಕಿದ್ದ ಹಾಗೆ ಮಳೆ ಸುರಿಯಿತು. ಕರಾವಳಿ-ಮಲೆನಾಡಿನಲ್ಲಿ ಅಂಗಳ ಗುಡಿಸೋವಾಗ ನೀರು ಚಿಮುಕಿಸುತ್ತಾರಲ್ಲ…. ಅಷ್ಟೇ ಅಷ್ಟು ಮಳೆ. ಅಂಥಾ ಮಳೆಗೂ ಪಾಪ ಆ  ಬೆಳ್ಳಗಿನ ಕರಿಮೂತಿಯ ನಾಯಿ ಮರಿ ಬೆದರಿ ಮಲಗಿತ್ತು. ಥೇಟ್ ದೇವದಾಸನ ಥರಾ! ಒಂದೂವರ ವರುಷ ಹಿಂದೆ ನೋಡಿದ ಮುಂಗಾರು  ಮಳೆಯ ಪ್ರತಿ ಫ್ರೇಮ್ ಕೂಡಾ ಹಾಗೆ ಕಣ್ಮುಂದೆ ಬಂದು ಹೋದವು. ನಾನು ಒಂದು ವರುಷ ಹಿಂದೆ ಹೋಗಿದ್ದೆ. ಸುಮ್ಮನೆ ಇಷ್ಟು ನಿಮಗೆ ಹೇಳಬೇಕು ಅನ್ನಿಸ್ತು ಅಷ್ಟೇ.
- ಪ್ರೀತು ಕೆಮ್ಮಾಯಿ
ಬರೆದದ್ದು -ಫೆಬ್ರವರಿ ತಿಂಗಳಿನಲ್ಲಿ

Blog at WordPress.com.